ಸ್ಪಾರ್ಟಕಸ್ (Spartacus)

ಕ್ರಿ.ಪೂ 73-72ರ ಅವಧಿಯಲ್ಲಿ ಒಲಿಗಾರ್ಕಿಕಲ್ ರೋಮನ್ ಆಳ್ವಿಕೆಯ ವಿರುದ್ಧದ ದಂಗೆಯಿಂದಾಗಿ ಸ್ಪಾರ್ಟಕಸ್ (Spartacus) ನನ್ನು ಸ್ಮರಿಸಲಾಗುತ್ತದೆ. ಥ್ರೇಸ್‌ನ ಖ್ಯಾತ ಗ್ಲಾಡಿಯೇಟರ್ ಆದ ಈತ ಕ್ರಿಕ್ಸಸ್, ಗ್ಯಾನಿಕಸ್, ಕ್ಯಾಸ್ಟಸ್ ಮತ್ತು ಓನೊಮಾಸ್‌ರವರುಗಳೊಂದಿಗೆ ಗ್ಲಾಡಿಯೇಟರ್ ಶಾಲೆಯಿಂದ ತಪ್ಪಿಸಿಕೊಂಡು ರೋಮನ್ ಇತಿಹಾಸದ ಅತ್ಯಂತ ಪ್ರಸಿದ್ಧ ದಂಗೆಯನ್ನು ಮುನ್ನಡೆಸಿದನು. ಮೂಲತಃ ಗುಲಾಮನಾಗಿದ್ದ ಸ್ಪಾರ್ಟಕಸ್ ಸೈನ್ಯಕ್ಕೆ ಸೇರಿದ ಅನೇಕ ಗುಲಾಮರಿಗೆ ಸ್ಫೂರ್ತಿಯಾಗಿದ್ದನು. ಸದಾ ಬಂಡಾಯ ಮನೋವೃತ್ತಿಯ ಗ್ಲಾಡಿಯೇಟರ್ ಸ್ಪಾರ್ಟಕಸ್ ‘ಮೂರನೇ ಸರ್ವೈಲ್’ ಯುದ್ಧದಲ್ಲಿ ಸೈನ್ಯದ ನಾಯಕ ಮತ್ತು ಜನರಲ್ ಆಗಿದ್ದನು. ಯೋಧನಾಗಿ ಅವನ ಶ್ರೇಷ್ಠತೆಯ ಹೊರತಾಗಿ ಆತನ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾಹಿತಿ ದೊರೆತಿಲ್ಲ. ಆದಾಗ್ಯೂ ಅವನನ್ನು ಗುಲಾಮ, ನುರಿತ ಮಿಲಿಟರಿ ಜನರಲ್ ಮತ್ತು ಉತ್ತಮ ನಾಯಕ ಎಂದು ಹೆಚ್ಚಿನ ಮೂಲಗಳು ಒಪ್ಪಿಕೊಳ್ಳುತ್ತವೆ. ಕೆಲವು ಇತಿಹಾಸಕಾರರು ಅವನು ಮುನ್ನಡೆಸಿದ ದಂಗೆಯನ್ನು ಗುಲಾಮಗಿರಿ ಮತ್ತು ದಬ್ಬಾಳಿಕೆಯ ವಿರುದ್ಧದ ಸ್ವಾತಂತ್ರ‍್ಯ ಹೋರಾಟವೆಂದು ಪರಿಗಣಿಸುತ್ತಾರೆ. ಈ ದಂಗೆ ಹಲವಾರು ಶತಮಾನಗಳಿಂದ ಜಗತ್ತಿನ ಅನೇಕ ಜನರಿಗೆ ಸ್ಫೂರ್ತಿಯಾಗಿದೆ. ಇದು ಸಾಹಿತ್ಯ, ದೂರದರ್ಶನ, ಕಲೆ ಮತ್ತು ಹಲವಾರು ಚಲನಚಿತ್ರಗಳಲ್ಲಿ ಚಿತ್ರಿಸಲ್ಪಟ್ಟಿದೆ. ಅನೇಕ ರಾಜಕೀಯ ಚಿಂತಕರು ಸ್ಪಾರ್ಟಕಸ್‌ನಿಂದ ಸ್ಫೂರ್ತಿ ಪಡೆದಿದ್ದಾರೆ. ಶಾಸ್ತ್ರೀಯ ಇತಿಹಾಸಕಾರರು ಸ್ಪಾರ್ಟಕಸ್‌ನ ಗುರಿಯ ಬಗ್ಗೆ ಬಿನ್ನಾಭಿಪ್ರಾಯ ಹೊಂದಿದ್ದಾರೆ. ಗುಲಾಮಗಿರಿಯನ್ನು ನಿರ್ಮೂಲನೆ ಮಾಡಲು ಅಥವಾ ರೋಮನ್ ಸಮಾಜವನ್ನು ಸುಧಾರಿಸಲು ಆತನು ಶ್ರಮಿಸಿರುವ ಬಗ್ಗೆ ಯಾವುದೇ ಐತಿಹಾಸಿಕ ವೃತ್ತಾಂತಗಳ ದಾಖಲೆಗಳಿಲ್ಲದಿರುವುದು ಇದಕ್ಕೆ ಪುಷ್ಠಿ ನೀಡಿದೆ.

ಆರಂಭಿಕ ಜೀವನ
ಸ್ಪಾರ್ಟಕಸ್ (Spartacus) ಕ್ರಿ.ಪೂ 109ರಲ್ಲಿ ಇಂದಿನ ಬಾಲ್ಕನ್‌ನ ‘ಥ್ರೇಸ್’ ಎಂಬಲ್ಲಿ ಜನಿಸಿದನೆಂದು ಊಹಿಸಲಾಗಿದೆ. ಆದರೆ ಅವನ ಬಾಲ್ಯದ ಬಗ್ಗೆ ಹೆಚ್ಚು ಮಾಹಿತಿ ತಿಳಿದಿಲ್ಲ. ಇವನು ಗುಲಾಮಗಿರಿಗೆ ಮಾರಾಟವಾಗುವ ಮೊದಲು ನೇಪಲ್ಸ್ ನ ಉತ್ತರದಲ್ಲಿದ್ದ ‘ಕ್ಯಾಪುವಾ’ ಎಂಬ ನಗರದಲ್ಲಿ ಗ್ಲಾಡಿಯೇಟರ್ ಆಗಿ ತರಬೇತಿ ಪಡೆಯುತ್ತಿದ್ದನು. ಗ್ರೀಕ್ ಪ್ರಬಂಧಕಾರ ಪ್ಲುಟಾರ್ಕ್ ಇವನನ್ನು ಥ್ರಾಸಿಯನ್ ಮೂಲದವನೆಂದು ದಾಖಲಿಸಿದ್ದಾನೆ. ಅವನ ದಾಖಲೆಗಳ ಪ್ರಕಾರ ಸ್ಪಾರ್ಟಕಸ್ ಥ್ರಾಸಿಯನ್ ಅಲೆಮಾರಿ ಜನಾಂಗದ ‘ಮೈಡಿ’ ಬುಡಕಟ್ಟಿನಲ್ಲಿ ಜನಿಸಿದನೆಂದು ನಂಬಲಾಗಿದೆ. ಅಲೆಕ್ಸಾಂಡ್ರಿಯಾದ ಗ್ರೀಕ್ ಇತಿಹಾಸಕಾರ ಅಪ್ಪಿಯನ್ ಸಹ ಈ ಹಕ್ಕನ್ನು ಮಂಡಿಸಿದ್ದಾನೆ.

ರೋಮನ್ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಸ್ಪಾರ್ಟಕಸ್‌ನನ್ನು ದೇಶದ್ರೋಹದ ಕೃತ್ಯಕ್ಕಾಗಿ ತನ್ನ ಸಹಚರರೊಂದಿಗೆ ಸೆರೆಹಿಡಿಯಲ್ಪಟ್ಟನೆಂದು ವ್ಯಾಪಕವಾಗಿ ನಂಬಲಾಗಿದೆ. ಸೆರೆಸಿಕ್ಕ ಅವನನ್ನು ಗುಲಾಮಗಿರಿಗೆ ಮಾರಲಾಯಿತು. ಸ್ಪಾರ್ಟಕಸ್‌ನ ಶಕ್ತಿಯನ್ನು ಪರಿಗಣಿಸಿದ ಆತನ ಸಹ ಸೆರೆಯಾಳುಗಳು ಅವನನ್ನು ಗ್ಲಾಡಿಯೇಟರ್ ಆಗಲು ಕಳುಹಿಸಿದರು. ರೋಮನ್ ಕವಿ ಫ್ಲೋರಸ್ ಸ್ಪಾರ್ಟಕಸ್‌ನು ಥ್ರಾಸಿಯನ್ ಕೂಲಿ ಸೈನಿಕನ ಪ್ರಭಾವದಿಂದ ರೋಮನ್ ಸೈನ್ಯಕ್ಕೆ ಸೈನಿಕನಾಗಿ ಸೇರಿ ನಂತರ ಅದನ್ನು ತೊರೆದು ಗುಲಾಮನಾದನೆಂದು ವಿವರಿಸಿದ್ದಾನೆ ಹಾಗೂ ಅವನ ಶಕ್ತಿಯನ್ನು ಗುರುತಿಸಿ ಗ್ಲಾಡಿಯೇಟರ್ ಎಂದಿದ್ದಾನೆ.

ತಪ್ಪಿಸಿಕೊಳ್ಳುವುದು
ಸ್ಪಾರ್ಟಕಸ್‌ನಿಗೆ ಆರಂಭದಲ್ಲಿ ‘ಕ್ಯಾಪುವಾ’ ಬಳಿಯ ಲುಡಸ್‌ನ ಗ್ಲಾಡಿಯೇಟೋರಿಯಲ್ ಶಾಲೆಯಲ್ಲಿ ತರಬೇತಿ ನೀಡಲಾಗುತ್ತಿತ್ತು. ಸ್ಪಾರ್ಟಕಸ್ (Spartacus) ಶಾಲೆಯ ಪರವಾಗಿ ಹೆವಿವೇಯ್ಟ್ ಗ್ಲಾಡಿಯೇಟರ್ ಆಗಿ ಸ್ಪರ್ಧಿಸಿ ನಂತರ ಮರ್ಮಿಲ್ಲೊ ಗ್ಲಾಡಿಯೇಟರ್ಸ್ ಪಂಥಕ್ಕೆ ಸೇರಿದನು. ರೋಮನ್ ಕತ್ತಿ, ಆಯತಾಕಾರದ ಮರದ ಗುರಾಣಿ, ದೊಡ್ಡ ಹೆಲ್ಮೆಟ್, ಶಿನ್ ಗಾರ್ಡ್, ಲೆದರ್ ಬೆಲ್ಟ್ ಮತ್ತು ಚರ್ಮದಿಂದ ಮಾಡಿದ ವಿಭಾಗೀಯ ಅಥವಾ ಸ್ಕೇಲ್ಡ್ ಆರ್ಮ್ ಗಾರ್ಡ್ ನಂತಹ ಹಲವಾರು ಆಯುಧಗಳು ಮತ್ತು ಸಲಕರಣೆಗಳನ್ನು ಬಳಸುತ್ತಿದ್ದನು. ಕ್ರಿ.ಪೂ 73ರಲ್ಲಿ 70 ಜನ ಸಹ ಗ್ಲಾಡಿಯೇಟರ್‌ಗಳೊಂದಿಗೆ ಗ್ಲಾಡಿಯೇಟೋರಿಯಲ್ ಶಾಲೆಯಿಂದ ತಪ್ಪಿಸಿಕೊಳ್ಳಲು ಯೋಜನೆಯನ್ನು ರೂಪಿಸಿದನು. ಎಲ್ಲರನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ಅಡುಗೆ ಪಾತ್ರೆಗಳ ಸಹಾಯದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು.

ಆ ಶಾಲೆಯಿಂದ ತಪ್ಪಿಸಿಕೊಂಡವರು ತಮ್ಮದೇ ಆದ ಸಣ್ಣ ಗುಂಪು ಕಟ್ಟಿಕೊಂಡು ಕಪುವಾ ಪಕ್ಕದ ಪ್ರದೇಶಗಳ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡರು. ಅನಂತರ ವೆಸುವಿಯಸ್ ಪರ್ವತದಲ್ಲಿ ಆಶ್ರಯ ಪಡೆದ ಅವರೊಂದಿಗೆ ಇತರೆ ಗುಲಾಮರು ಬಂದು ಸೇರಿಕೊಂಡರು. ಸ್ಪಾರ್ಟಕಸ್ ನಿರಾಶ್ರಿತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದುದರ ಜೊತೆಗೆ ಯುದ್ಧ ಕೌಶಲ್ಯಗಳಲ್ಲಿ ತರಬೇತಿ ನೀಡಿ ತನ್ನದೇ ಆದ ಸೈನ್ಯ ಸಂಘಟಿಸಿದನು. ಈ ಗುಲಾಮರ ಅಥವಾ ಬಂಡುಕೋರರ ಸೈನ್ಯ ಅಂತಿಮವಾಗಿ ಇಟಲಿಯನ್ನು ಅಲ್ಲಾಡಿಸಿತು. ಸ್ಪಾರ್ಟಕಸ್‌ನೊಂದಿಗೆ ಸೈನ್ಯದ ಜಂಟಿ ನಾಯಕರಾಗಿ ಗ್ಯಾಲಿಕ್ ಗುಲಾಮರಾದ ಕ್ರಿಕ್ಸಸ್ ಮತ್ತು ಓನೊಮಾಸ್‌ರು ಸೈನ್ಯವನ್ನು ಸಮರ್ಥವಾಗಿ ಮುನ್ನಡೆಸಿದರೆಂದು ನಂಬಲಾಗಿದೆ.

ಸ್ಪಾರ್ಟಕಸ್ ಯುದ್ಧ
ಕ್ಯಾಪುವಾ ಗ್ಲಾಡಿಯೇಟೋರಿಯಲ್ ಶಾಲೆಯಿಂದ ತಪ್ಪಿಸಿಕೊಂಡ ಸಮಯದಲ್ಲಿ ಮೂರನೇ ‘ಸರ್ವೈಲ್ ಯುದ್ಧ’ ಅಥವಾ ‘ಸ್ಪಾರ್ಟಕಸ್ ಯುದ್ಧ ಪ್ರಾರಂಭವಾಯಿತು. ರೋಮನ್ನರು ಇದನ್ನು ಯುದ್ದವೆಂದು ಬಿಂಬಿಸಲಿಲ್ಲ ಬದಲಾಗಿ ಪೋಲಿಸಿಂಗ್ ವಿಷಯವೆಂದು ಪರಿಗಣಿಸಿ ನಿರಂತರವಾಗಿ ಬೆಳೆಯುತ್ತಿದ್ದ ಗುಲಾಮರ ಸೈನ್ಯವನ್ನು ನಿಗ್ರಹಿಸಲು ಪ್ರೆಟರ್ ಗಯಸ್ ಕ್ಲಾಡಿಯಸ್ ಗ್ಲೇಬರ್ ನೇತೃತ್ವದಲ್ಲಿ ಸೈನ್ಯವನ್ನು ಕಳುಹಿಸಿದರು. ವೆಸುವಿಯಸ್ ಪರ್ವತಕ್ಕೆ ಮುತ್ತಿಗೆ ಹಾಕಿದ ಗಯಸ್ ಹಸಿವಿನಿಂದಾಗಿ ಸ್ಪಾರ್ಟಕಸ್ ಮತ್ತು ಅವನ ಸೈನ್ಯ ಶರಣಾಗಲಿದೆ ಎಂದು ಭಾವಿಸಿದನು. ತಮ್ಮ ಮೊದಲ ದಾಳಿಯಲ್ಲಿ ಸ್ಪಾರ್ಟಕಸ್ ಮತ್ತು ಅವನ ಸೈನ್ಯವು ಬಳ್ಳಿಗಳಿಂದ ಮಾಡಿದ ಹಗ್ಗಗಳನ್ನು ಕೆಳಗೆ ಬಿಟ್ಟು ರೋಮನ್ನರ ಮೇಲೆ ಹಠಾತ್ ದಾಳಿ ಮಾಡಿ ಅನೇಕ ಸೈನಿಕರನ್ನು ಕೊಂದರು. ಬಂಡುಕೋರರು ಎರಡನೇ ದಾಳಿಯನ್ನು ಯಶಸ್ವಿಯಾಗಿ ಮಾಡಿ ಗಯಸ್‌ನ ನಿದ್ದೆಗೆಡಿಸಿದರು. ಈ ದಾಳಿಗಳಿಂದಾಗಿ ರೋಂನ ಅನೇಕ ಲೆಫ್ಟಿನೆಂಟ್‌ಗಳು ಪ್ರಾಣ ಕಳೆದುಕೊಂಡರು. ಸ್ಪಾರ್ಟಕಸ್ ಪಡೆ ‘ಪ್ರೆಟರ್ ಗಯಸ್’ನನ್ನು ಸೋಲಿಸಿ ಆತನ ಮಿಲಿಟರಿ ಉಪಕರಣಗಳನ್ನು ವಶಪಡಿಸಿಕೊಂಡಿತು. ಈ ಯಶಸ್ಸಿನಿಂದಾಗಿ ಹಲವಾರು ಜನರು ಸ್ಪಾರ್ಟಕಸ್‌ನ ಜೊತೆ ಸೇರಿಕೊಂಡರು. ಇದರಿಂದಾಗಿ ಅವನ ಸೈನ್ಯದ ಸಂಖ್ಯೆ ಸುಮಾರು 70,000 ಕ್ಕೆ ಏರಿತು.

ಏತನ್ಮಧ್ಯೆ ಬಂಡುಕೋರರ ಸೈನ್ಯದಲ್ಲಿ ಒಳಜಗಳಗಳು ಸ್ಪೋಟಗೊಂಡವು. ಸ್ಪಾರ್ಟಕಸ್ (Spartacus) ತನ್ನ ಬುದ್ಧಿ ಮತ್ತು ಹಿಂದಿನ ಮಿಲಿಟರಿ ಅನುಭವದಿಂದ ಎಲ್ಲವನ್ನು ಹೋಗಲಾಡಿಸುವ ಮೂಲಕ ಎಂತಹ ಕ್ಲಿಷ್ಟಕರ ಸಂದರ್ಭಗಳನ್ನು ನಿಭಾಯಿಸಬಲ್ಲನೆಂದು ಸಾಬೀತು ಪಡಿಸಿದನು. ಕ್ರಿ.ಪೂ 73-72 ರ ಚಳಿಗಾಲದಲ್ಲಿ ಬಂಡುಕೋರರು ತಮ್ಮ ಸೈನ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ನೇಮಿಸಿಕೊಂಡು ಅವರಿಗೆ ಸೂಕ್ತ ತರಬೇತಿ ನೀಡಿ ನೋಲಾ, ನುಸೇರಿಯಾ, ಮೆಟಾಪಾಂಟಮ್ ಮತ್ತು ಥುರಿಯಂತಹ ಪಟ್ಟಣಗನ್ನು ಗೆದ್ದು ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿದರು. ಗುಲಾಮರ ಸೈನ್ಯದ ಒಂದು ಗುಂಪನ್ನು ಸ್ಪಾರ್ಟಕಸ್ ಹಾಗೂ ಇನ್ನೊಂದು ಗುಂಪನ್ನು ಕ್ರಿಕ್ಸಸ್ ಮುನ್ನಡೆಸುತ್ತಿದ್ದರು. ಕ್ರಿಕ್ಸಸ್ ತನ್ನ 30,000 ಜನರ ಸೈನ್ಯದ ಸಹಾಯದಿಂದ ಇಟಲಿಯಾದ್ಯಂತ ಅನೇಕ ಜನರನ್ನು ಕೊಂದು ಅವರ ಸಂಪತ್ತನ್ನು ಲೂಟಿ ಮಾಡಿ ಆಸ್ತಿಗಳನ್ನು ಕೊಳ್ಳೆ ಹೊಡೆದನು.

ನಂತರ ಬಂಡುಕೋರರು ತಮ್ಮ ಚಳಿಗಾಲದ ಕಂಟೋನ್‌ಮೆಂಟ್ ಗಳನ್ನು ಬಿಟ್ಟು ಇಟಲಿಯ ಉತ್ತರದ ಕಡೆಗೆ ಹೊರಟರು. ಇವರ ದಾಳಿಯಿಂದಾಗಿ ಹಾಗೂ ಪ್ರೆಟರ್ ಗಯಸ್ ಸೈನ್ಯದ ವೈಫಲ್ಯದಿಂದಾಗಿ ರೋಮನ್ ಸೆನೆಟ್ ಭಯಭೀತಗೊಂಡಿತು. ಕೂಡಲೇರೋಂ ಸೆನೆಟ್ ಬಂಡುಕೋರರನ್ನು ಎದುರಿಸಲು ಗ್ನೇಯಸ್ ಕಾರ್ನೆಲಿಯಸ್ ಲೆಂಟುಲಸ್ ಕ್ಲೋಡಿಯಾನಸ್ ಮತ್ತು ಲೂಸಿಯಸ್ ಗೆಲಿಯಸ್ ಪಬ್ಲಿಕೋಲಾ ನೇತೃತ್ವದಲ್ಲಿ ಎರಡು ಕಾನ್ಸುಲರ್ ಪಡೆಗಳನ್ನು ರಚಿಸಿತು. ಇವರಿಬ್ಬರ ನೇತೃತ್ವದ ಸೈನ್ಯ ಸ್ವಲ್ಪ ಸಮಯದವರೆಗೆ ಯಶಸ್ಸನ್ನು ಗಳಿಸಿತು. ಈ ಜಂಟಿ ಸೈನ್ಯವು ಗಾರ್ಗನಸ್ ಪರ್ವತದ ಬಳಿ ನಡೆದ ಯುದ್ಧದಲ್ಲಿ ಕ್ರಿಕ್ಸಸ್ ನೇತೃತ್ವದ ಬಂಡುಕೋರರ ಸೈನ್ಯವನ್ನುಸೋಲಿಸಿತು. ಆದರೆ ಶೀಘ್ರದಲ್ಲೇ ಸ್ಪಾರ್ಟಕಸ್ ರೋಮನ್ ಸೈನ್ಯವನ್ನು ಸೋಲಿಸಿದನು.

ಈ ವೇಳೆಗಾಗಲೇ ಬಂಡುಕೋರರ ಆಕ್ರಮಣದ ಭಯದಿಂದ ರೋಮನ್ ಜನತೆ ಆಕ್ರೋಶಗೊಂಡಿದ್ದರು. ರೋಮನ್ ಸೆನೆಟ್ ಮಾರ್ಕಸ್ ಲೈಸಿನಿಯಸ್ ಕ್ರಾಸ್ಸಸ್‌ನಿಗೆ ಬಂಡುಕೋರರನ್ನು ಸೋಲಿಸುವ ಉಸ್ತುವಾರಿ ವಹಿಸಿದರು. 40,000 ಸೈನಿಕರನ್ನು ಹೊಂದಿದ್ದ ಸೈನ್ಯದ ಎಂಟು ವಿಭಾಗಗಳನ್ನು ನಿರ್ವಹಿಸಿದ ಅನುಭವ ಅವನಿಗಿತ್ತು. ಕ್ರಿ.ಪೂ. 71 ರ ಸುಮಾರಿಗೆ ಸ್ಪಾರ್ಟಕಸ್ ತನ್ನ ಸೈನ್ಯ ಸಮೇತ ಇಟಲಿಯ ಉತ್ತರದ ಕಡೆಗೆ ಹೋದನೆಂದು ತಿಳಿದ ಕ್ರಾಸ್ಸಸ್ ಅವನನ್ನು ಎದುರಿಸಲು ಸೈನ್ಯವನ್ನು ಸಜ್ಜುಗೊಳಿಸಿದನು. ಜೊತೆಗೆ ಕ್ರಾಸ್ಸಸ್ ತನ್ನ ಜನರಲ್ ಮುಮ್ಮಿಯಸ್‌ನನ್ನು ಸೈನ್ಯದ ಇತರ ಎರಡು ವಿಭಾಗದೊಂದಿಗೆ ಪ್ರತ್ಯೇಕವಾಗಿ ಕಳುಹಿಸಿದನು. ಮುಮ್ಮಿಯಸ್‌ನಿಗೆ ದಾಳಿ ಮಾಡಲು ಆಜ್ಞೆ ನೀಡದಿದ್ದರೂ ಸಹ ಆತ ಒಂದು ಅನಾನುಕೂಲಕರ ಕ್ಷಣದಲ್ಲಿ ಬಂಡುಕೋರರ ಮೇಲೆ ದಾಳಿ ಮಾಡಿ ಸೋತನು. ನಂತರದ ಹಲವಾರು ಯುದ್ದಗಳಲ್ಲಿ ರೋಮನ್ ಸೈನ್ಯವು ವಿಜಯ ದಾಖಲಿಸಿತು. ಸೋತ ಸ್ಪಾರ್ಟಕಸ್ ದಕ್ಷಿಣಕ್ಕೆ ಹಿಮ್ಮೆಟ್ಟಿ ಮೆಸ್ಸಿನಾ ಜಲಸಂಧಿ ಬಳಿಯ ರೀಜಿಯಂನಲ್ಲಿ ನೆಲೆಸಿದನು.

ಕ್ರಾಸ್ಸಸ್‌ನ ಆಕ್ರಮಣದ ದೃಷ್ಟಿಯಿಂದ ಸ್ಪಾರ್ಟಕಸ್ ತನ್ನ 2,000 ಜನರನ್ನೊಳಗೊಂಡ ಸೈನ್ಯವನ್ನು ಸಿಸಿಲಿಗೆ ಕರೆದೊಯ್ಯಲು ಯೋಜಿಸಿ ಸಿಲಿಸಿಯನ್ ಕಡಲ್ಗಳ್ಳರ ಸಹಾಯವನ್ನು ಯಾಚಿಸಿದನು. ಅಲ್ಲಿ ದಂಗೆಯನ್ನು ಹುಟ್ಟುಹಾಕಲು ಮತ್ತು ಸೈನ್ಯವನ್ನು ಬಲಪಡಿಸಲು ಯೋಜಿಸಿದ್ದನು. ಆದರೆ ಕಡಲ್ಗಳ್ಳರು ಅವನಿಗೆ ದ್ರೋಹ ಬಗೆದುದರಿಂದ ಅದು ಸಾಧ್ಯವಾಗಲಿಲ್ಲ ಎಂದು ಪ್ಲುಟಾರ್ಕ್ ಉಲ್ಲೇಖಿಸಿದ್ದಾನೆ. ಇದರಿಂದ ಅವನ ಪಡೆಗಳು ಪುನಃ ರೀಜಿಯಂ ಕಡೆಗೆ ಹಿಮ್ಮೆಟ್ಟುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಕೂಡಲೇ ಅವನ ಪಡೆಯನ್ನು ಕ್ರಾಸ್ಸಸ್‌ನ ಸೈನ್ಯವು ಸುತ್ತುವರೆಯಿತು. ಇದರಿಂದಾಗಿ ಬಂಡುಕೋರರು ತಮ್ಮ ಮೂಲ ಸೌಕರ್ಯಗಳ ಸರಬರಾಜಿನ ಕೊಂಡಿಯನ್ನು ಕಳಚಿಕೊಂಡು ತತ್ತರಿಸಿದರು.

ಇದರ ನಡುವೆ ರೋಮನ್ ಸೆನೆಟ್ ಜನರಲ್ ಪಾಂಪೆಯನ್ನು ಸೈನ್ಯದ ಜೊತೆ ದಕ್ಷಿಣಕ್ಕೆ ಕಳುಹಿಸಿ ಕ್ರಾಸ್ಸಸ್‌ನಿಗೆ ದಂಗೆಕೋರರನ್ನು ಸೆರೆಹಿಡಿಯಲು ಸಹಾಯ ಮಾಡುವಂತೆ ಆದೇಶಿಸಿತು. ತಮ್ಮೆಲ್ಲಾ ಸಾಧನೆಗಳ ಲಾಭವನ್ನು ಪಾಂಪೆ ಪಡೆದುಕೊಳ್ಳುತ್ತಾನೆಂಬ ಭಾವನೆಯಿಂದ ಕ್ರಾಸ್ಸಸ್ ಅವನ ಸಹಾಯವನ್ನು ನಿರಾಕರಿಸಿದನು. ಪರಿಸ್ಥಿತಿಯನ್ನರಿತ ಸ್ಪಾರ್ಟಕಸ್ ಯುದ್ಧವನ್ನು ತೊರೆದು ಕ್ರಾಸ್ಸಸ್‌ನೊಂದಿಗೆ ಮಾತುಕತೆ ನಡೆಸಲು ಮತ್ತು ಒಪ್ಪಂದಕ್ಕೆ ಬರಲು ಪ್ರಯತ್ನಿಸಿದಾಗ ಆತ ನಿರಾಕರಿಸಿದನು. ಇದರಿಂದ ಬಂಡುಕೋರರು ದುರ್ಬಲಗೊಳ್ಳುತ್ತಿದ್ದಾರೆಂದು ಭಾವಿಸಿ ಅವರ ಮೇಲೆ ಆಕ್ರಮಣ ಮಾಡಲು ಸಜ್ಜಾದನು. ಕ್ರಾಸ್ಸಸ್‌ನ ಭಯದಿಂದ ಸ್ಪಾರ್ಟಕಸ್‌ನ ಸೈನ್ಯದ ಕೆಲವು ಭಾಗಗಳು ಪೆಟೆಲಿಯಾದ ಪಶ್ಚಿಮಕ್ಕೆ ಪರ್ವತಗಳ ಕಡೆಗೆ ತಪ್ಪಿಸಿಕೊಂಡವು. ಆದರೆ ಕ್ರಾಸ್ಸಸ್‌ನ ಸೈನ್ಯವು ಯುದ್ದವನ್ನು ಪ್ರಾರಂಭಿಸಿ ಅಂತಿಮವಾಗಿ ಬಂಡುಕೋರರ ಉಳಿದ ಸೈನ್ಯದೊಂದಿಗೆ ಹೋರಾಡಿತು. ಸ್ಪಾರ್ಟಕಸ್ ಹೋರಾಟದ ಕಾರ್ಯತಂತ್ರವನ್ನು ಬದಲಾಯಿಸಿ ಸೈನ್ಯದ ಸಣ್ಣ ಘಟಕಗಳೊಂದಿಗೆ ಮೇಲೆರಗುತ್ತಿದ್ದ ಕ್ರಾಸ್ಸಸ್ ಸೈನ್ಯದ ಮೇಲೆ ದಾಳಿ ಮಾಡಿದನು. ಆದರೂ ಬಂಡುಕೋರರ ಸೈನ್ಯವನ್ನು ಹತ್ತಿಕ್ಕಲಾಯಿತು. ಅವರಲ್ಲಿ ಹೆಚ್ಚಿನವರು ಈ ಯುದ್ಧದಲ್ಲಿ ಕೊಲ್ಲಲ್ಪಟ್ಟರು. ಅಂತಿಮವಾಗಿ ಯುದ್ಧದಲ್ಲಿ ಸ್ಪಾರ್ಟಕಸ್‌ ಸೋಲಿನ ರುಚಿ ಅನುಭವಿಸಿದನು. ಬಂಡಾಯ ಸೈನ್ಯದಲ್ಲಿ ಬದುಕುಳಿದ ಜನರನ್ನು ರೋಮ್‌ನಿಂದ ಕ್ಯಾಪುವಾವರೆಗಿನ ಮಾರ್ಗದಲ್ಲಿ ಶಿಲುಬೆಗೇರಿಸಲಾಯಿತೆಂದು ಉಲ್ಲೇಖಿಸಲಾಗಿದೆ. ಈ ಯುದ್ಧವು ಇಟಲಿಯ ಆಧುನಿಕ ಸೆನೆರ್ಚಿಯಾದಲ್ಲಿ ಸಂಭವಿಸಿತೆಂದು ಹೇಳಲಾಗುತ್ತದೆ. ಆ ಸಮಯದ ಹಲವಾರು ಯುದ್ಧೋಪಕರಣಗಳು ಈ ಪ್ರದೇಶದಲ್ಲಿ ಕಂಡುಬಂದಿದ್ದು ಇದಕ್ಕೆ ಸಾಕ್ಷಿಯಾಗಿವೆ. ಗ್ರೀಕ್ ಇತಿಹಾಸಕಾರ ಅಪ್ಪಿಯನ್ ಹಾಗೂ ಕವಿ ಫ್ಲೋರಸ್ ಸಹ ಸ್ಪಾರ್ಟಕಸ್ ಯುದ್ಧದ ಸಮಯದಲ್ಲಿ ನಿಧನರಾದರೆಂದು ಪ್ಲುಟಾರ್ಕ್ ಹೇಳಿದ್ದಾನೆ.

# ಸ್ಪಾರ್ಟಕಸ್

# Spartacus

# kannada butti